[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]
``ನನ್ನ ಬದುಕಿನ ಬಗೆಗೆ ಯಾರೂ ಬರೆಯಲಾರರು. ಏಕೆಂದರೆ ಅದು ಮಾನವರ ದೃಷ್ಟಿಗೆ ಗೋಚರವಾಗುವಂತೆ ಹೊರ-ಮುಖವಾಗಿ ಸಾಗಿಲ್ಲ.''
ಶ್ರೀ ಅರವಿಂದರ ಈ ಮೇಲಿನ ಮಾತು ಮತ್ತೊಬ್ಬರ ಜೀವನಚಿತ್ರವನ್ನು ಬರೆಯಲು ಹೊರಡುವವರೆಲ್ಲರಿಗೂ ಎಚ್ಚರಿಕೆಯಂತಿದೆ.
ಯಾವುದೇ ಒಬ್ಬ ವ್ಯಕ್ತಿಯ ಬದುಕು ಅಂತರ್ಮುಖ ಮತ್ತು ಬಹಿರ್ಮುಖಗಳಿಂದ ಕೂಡಿದ್ದಾಗಿರುತ್ತದೆ.
ಮೇಲುನೋಟಕ್ಕೆ ತನ್ನ ಸಾಧನೆಗಳಿಂದ ಉತ್ಪನ್ನವಾಗುವ ವಿಚಾರಗಳು
ಮಾತ್ರ ಜೀವನ ಚಿತ್ರಗಳಲ್ಲಿ ದಾಖಲಾಗುತ್ತವೆ. ಆದರೆ ವ್ಯಕ್ತಿಯ
ಅಂತರಂಗದ ಅಸಂಖ್ಯ ತೊಳಲಾಟಗಳು ಜೀವನಚಿತ್ರಗಳಲ್ಲಿ ದಾಖಲಾಗದೆ
ಹೋಗುವ ಸಂಭವವೇ ಹೆಚ್ಚು. ಹಾಗಾಗಿ ಯಾವುದೇ ಒಬ್ಬ ವ್ಯಕ್ತಿಯ
ಅಥವಾ ಸಾಧಕನೊಬ್ಬನ ವ್ಯಕ್ತಿಚಿತ್ರ ಹಾಗೂ ಜೀವನಚಿತ್ರವು ಎಂದಿಗೂ
ಅವರ ಸಮಷ್ಟಿ ಬದುಕನ್ನು ಸಂಪೂರ್ಣವಾಗಿ ಕಟ್ಟಿಕೊಡಲಾರವು.
ಸಂತ ಅರವಿಂದರ ಮೇಲಿನ ಉದ್ಧರಣೆ ಮತ್ತೊಬ್ಬರ ಜೀವನಚಿತ್ರಗಳನ್ನು
ಬರೆಯುವವರಿಗೆ ಒಂದು ಬಗೆಯ ಎಚ್ಚರವನ್ನುಂಟು ಮಾಡಿದರೂ ಸಾಧಕನೊಬ್ಬನ
ಅಥವಾ ವಿಶಿಷ್ಟ ಪ್ರತಿಭಾನ್ವಿತನ ಜೀವನಚಿತ್ರಗಳು ಯಾವುದೇ ಸಾಂಸ್ಕೃತಿಕ
ಸಂದರ್ಭದಲ್ಲಿ ಅನೇಕ ಕಾರಣಗಳಿಗಾಗಿ ಮುಖ್ಯವಾಗುತ್ತವೆ ಎಂಬುದನ್ನು
ಮರೆಯುವಹಾಗಿಲ್ಲ. ವ್ಯಕ್ತಿಯೊಬ್ಬ ತನ್ನ ಸಾಧನೆಯ ಹಾದಿಯಲ್ಲಿ
ನಡೆಸಿದ ಪ್ರಯೋಗಶೀಲ ಬದುಕು ಮುಂದಿನ ಪೀಳಿಗೆಗೆ ಪ್ರೇರಣೆ ಹಾಗೂ
ಮಾರ್ಗದರ್ಶನವಾಗಬಹುದು. ಹೊಸ ಹೊಸ ಸಾಧನೆಗಳಿಗೆ ಚೈತನ್ಯವನ್ನು
ನೀಡಿ ತಮ್ಮ ತಮ್ಮ ಅಸ್ತಿತ್ವಗಳ ಹುಡುಕಾಟಕ್ಕೆ ಅನುವು ಮಾಡಿಕೊಡುವ
ನಿಟ್ಟಿನಲ್ಲಿ ಸಾರ್ಥಕಗೊಳ್ಳಬಹುದು. ಮತ್ತೊಬ್ಬರ ಬಗ್ಗೆ ಬರೆಯುವುದು
ಸಂಪೂರ್ಣವಾದ ಕಾಣ್ಕೆಯಾಗಲಾರದಾದರೂ ಸಾಮಾಜಿಕ ಜವಾಬ್ದಾರಿಯನ್ನು
ಹೊತ್ತ ಮಾನವೀಯ ವ್ಯಕ್ತಿಗಳನ್ನು ಮತ್ತೆ ಮತ್ತೆ ನೆನೆಯುವುದು
ನಾವು ಅವರಿಗೆ ಸಲ್ಲಿಸುವ ಕೃತಜ್ಞತಾಪೂರ್ವಕ ಗೌರವವೆಂದು ಭಾವಿಸಿ
ಪುಟ್ಟಪ್ಪನವರ ಪುಟ್ಟ ಪರಿಚಯವನ್ನು ಇಲ್ಲಿ ಕೊಡಲು ಪ್ರಯತ್ನಿಸಲಾಗಿದೆ.
|